Wednesday 25 March 2015

"ಸುರಗಿ"ಯಲ್ಲಿ ಪ್ರಕಟವಾದ ನನ್ನ  ಕವನ

ಏನೇ ಆಗಲಿ ನೀ ನಮ್ಮವನು

ಕಾವಿಯ ಕಾನದಿ ಅಡಗಿಸಿಟ್ಟೆವು,
ಮಂತ್ರದ ಬೇಲಿಯ ಹಾಕಿಬಿಟ್ಟೆವು,
ಗುಡಿಯ ಗೋಡೆಯಲಿ ಕೂಡಿಹಾಕಿದೆವು,
ಏನೇ  ಆಗಲಿ  ನೀ ನಮ್ಮವನು...

ಪುಟ್ಟ ಕೆಲಸಕ್ಕೆ ಗುಡಿಯೇ ಸಾಕು,
ಭಾರಿ ಕೋರಿಕೆಗೆ ಮಹಲಿರಬೇಕು,
ಬಳಿಯಲಿ ಕಾಣಲು ಅನುಮತಿಬೇಕು,
ಜೇಬಿನ ತುಂಬಾ ನೋಟಿರಬೇಕು

ಆದರೂ ಬರುವೆವು ... ಏಕೆ.. ಏನೇ  ಆಗಲಿ  ನೀ ನಮ್ಮವನು...

ನೀನಾರೆಂದೇ ತಿಳಿದಿಲ್ಲ,
ನಿನ್ನ ಅಭಿಪ್ರಾಯವೂ ಗೊತ್ತಿಲ್ಲ,
ಅವನ ಹೊಡೆದು, ಇವನ ಕಡಿದು
ನಿನ್ನ  ಹೆಸರನೇ ನುಡಿಯುವೆವು,

ಏಕೆ ... ಏನೇ  ಆಗಲಿ  ನೀ ನಮ್ಮವನು...

ತಿಲಕ ಇಟ್ಟರೆ ಹಿಂದೂ ನಾನು
ಟೋಪಿ ಹಾಕಿದೊಡೆ ಮುಸ್ಲಿಮನು ,
ಕೊರಳಿಗೆ ಶಿಲುಬೆ ಬೀಳುತ್ತಲೇ
ನಾ ಈಸಾಯಿಯಾಗಿಬಿಡುವೆನು,
ನನಗೆ ನಾನಾರೆಂದೂ ತಿಳಿದಿಲ್ಲ

ಆದರೆ  ನಿನ್ನನಂತೂ ನಾ ಬಿಡಲೊಲ್ಲೆ,

ಏಕೆ... ಏನೇ  ಆಗಲಿ  ನೀ ನಮ್ಮವನು...

Thursday 12 March 2015

ನನ್ನ ಸಣ್ಣ ಕಥೆ "ಅಂತರಾಳ" ಅವಧಿಯಲ್ಲಿ 
ನನ್ನ ಕವನ "ಅಳಲು " ಸುರಗಿಯಲ್ಲಿ



ನಾನೀಗ ಮಾಸಿದ ಪಾತ್ರೆ ,
ನನ್ನ ಜಾಗ ಅಡುಗೆ ಮನೆಯ ಮೂಲೆ ,
ಅರೆಬರೆ ಮಿಕ್ಕಿದ, ಅರ್ಧ ತಿಂದು
ಇನ್ನರ್ಧ ಕಕ್ಕಿದ, ಹಳಸಿದ ತಿನಿಸು ಮಾತ್ರ ನನಗೆ


ನನಗೂ ಯವ್ವನವಿತ್ತು ,
ಮಿರಿ ಮಿರಿ ಮಿಂಚುವ ಬಣ್ಣವಿತ್ತು,
ನನ್ನ ಒಡಲಲ್ಲೂ ಕೆನೆ ಹಾಲು ತೇಲಿತ್ತು.
ಈ ಮನೆಯ ಗೃಹಪ್ರವೇಶವೂ ನನ್ನ
ಹೃದಯದಿಂದ ಉಕ್ಕಿದ ಸಿಹಿ ಹಾಲಿಂದಲೇ ಆಗಿತ್ತು.

ಆದರೆ ಕಿಲುಬು ಹಿಡಿದಿದೆ ನನಗೀಗ,
ಶುಭದ ಯಾವುದೇ ಕೆಲಸಕ್ಕೂ ಯೋಗ್ಯನಲ್ಲ ನಾ ,
"ಎಷ್ಟು ಚಂದವಿದೆ, ಈ ಪಾತ್ರೆ " ಎಂದು
ಹೊಗಳಿದ್ದ ನನ್ನ ಮನೆಯವರೇ ,
ಈಗ "ಕಾಲು-ಕಾಲಿಗೆ ಸಿಗುತ್ತೆ ಹಾಳಾದ್ದು " ಎಂದು ತೆಗಳುವರು

ಇಂದಲ್ಲ ನಾಳೆ ನಾ ಇಲ್ಲಿಂದ ಹೊರಡುವವ
"ಹಳೇ ಪೇಪರ್ -ಖಾಲಿ ಶೀಶೆ " ಮಾರುವವನ
ಗುಜರಿ ಸೇರುವವ ,
ಹೋಗುವ ಮುನ್ನ ಒಂದೇ ಬಯಕೆ ,
ನನ್ನ ಅವನಿಗೆ ಕೊಡುವಾಗ , ಒಮ್ಮೆ ನೆನೆಯಿರಿ
ಕೊಟ್ಟ ಮೇಲೆ ನಾ ಮತ್ತೆ ಬರಲಾರೆನೆಂದು 

Monday 9 March 2015

ವೇದನೆ

ಆಗಸ ಸಿಟ್ಟಿನಿಂದಲೋ ಏನೋ ಕಪ್ಪಿಟ್ಟಿತ್ತು. ನನ್ನ ಮನದಂತೆಯೇ ಅಲ್ಲೂ ಕೋಲಾಹಲ. ಗುಡುಗು, ಮಿಂಚುಗಳ ಗದ್ದಲ. ರೂಮಿನ ಒಳಗಡೆಯೂ ಕತ್ತಲು , ಹೊರಗಡೆಯೂ ಕೂಡ. ಒಳಗೆ ಕುಳಿತು ಆಗಸದ ಕಡೆಗೆ ದೃಷ್ಟಿ ನೆಟ್ಟಿದ್ದೆ. ಮಬ್ಬಾಗಿದ್ದ ಆಗಸದಿಂದ ಭರವಸೆಯ ಕೊಲ್ಬೆಳಕು  ಬಂದಂತೆ ಕೈಲಿದ್ದ ಮೊಬೈಲ್ ಒಮ್ಮೆ ರಿಂಗಣಿಸಿತು,  ಆಸೆಯಿಂದ ಮೊಬೈಲ್ ನೋಡಿದೆ.. airtel ನವರ ಮೆಸೇಜ್ ಇತ್ತು.  ಮತ್ತೆ ಅದೇ ಮೌನ.. ಅದೇ ಕತ್ತಲು. whatsapp ನಲ್ಲಿ  ಕ್ಷಮಾಳ ಪೇಜ್ ತೆಗೆದೆ, online ಎಂದು ಕಾಣಿಸುತ್ತಿತ್ತು. ನೋಟ ಬರುಬರುತ್ತಾ ಮಂಜಾಗತೊಡಗಿತು. ನೋಡ ನೋಡುತ್ತಲೇ ಕಣ್ಣಿಂದ ಜಾರಿದ ಹನಿ ಮೊಬೈಲಿನ ಮೇಲೆ ಬಿತ್ತು. ತಕ್ಷಣವೇ ಅತ್ತಿತ್ತ ನೋಡಿ ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡೆ. ಕಣ್ಣೀರೂ ಒಂದು ಭಾಷೆ. ಎಲ್ಲರಿಗೂ ಅರ್ಥವಾಗದ ಭಾಷೆಯಷ್ಟೇ. ಮನದ ಮುಗಿಲಿನಲ್ಲೂ ಹೊರಗಿನಂತೆಯೇ ಗುಡುಗು ಸಿಡಿಲು ಸಹಿತ ಮಳೆ ಹೊಯ್ಯಲು ಆರಂಭಿಸಿತು.  "ಅವಳ ವರ್ತನೆಯಲ್ಲಿ ಇಷ್ಟೊಂದು ಬದಲಾವಣೆ ಏಕೆ ? " ಎನ್ನುವಾಗ ಹಿಂದಿನ ಸನ್ನಿವೆಶವೆಲ್ಲ ಸ್ಮೃತಿಪಟಲದಲ್ಲಿ ಒಂದೊಂದಾಗಿ ಬರತೊಡಗಿದವು..

ನನ್ನ ಮಟ್ಟಿಗೆ ಕ್ಷಮಾ ಮತ್ತು ನನ್ನ ಸಂಬಂಧ 'ಹೆಸರ'ನ್ನು ಮೀರಿದ್ದು.  ಆಕೆ ನನಗೆ ಒಬ್ಬಳು ಪ್ರೀತಿಯ ಸ್ನೇಹಿತೆ, ಅಕ್ಕರೆಯ ತಂಗಿ, ಮಮತೆಯ ತಾಯಿ ಎಲ್ಲಾ ಆಗಿದ್ದಳು. ಅವಳು ನನ್ನ ಭೇಟಿಯಾಗಿದ್ದು ಈಗ್ಗೆ ಎರಡು ವರುಷದ ಹಿಂದೆ, ನಾನು ಹಾಸನದಲ್ಲಿ ಇಂಜಿನಿಯರಿಂಗ್ ಮಾಡುವಾಗ. ನಾನು ಬಿ.ಇ ಮುಗಿಸಿ ಪುಣೆಗೆ ಬಂದ ನಂತರವಂತೂ ಅವಳ ನನ್ನ ಸಂಬಂಧ ಇನ್ನಷ್ಟು ಗಟ್ಟಿಯಾಯಿತು. ಇದಕ್ಕೆ ಮೂಲ ಕಾರಣ ಪ್ರಾಯಶಃ ನನ್ನ ಒಂಟಿತನ. ಭಾಷೆ ಅರಿಯದ ಊರಿನಲ್ಲಿ ನನ್ನವರು ಎನ್ನುವ ಒಂದು ನರಪ್ರಾಣಿಯೂ ಇಲ್ಲದಿರುವಾಗ, ಫೋನಿನಲ್ಲಿ ಆಗುವ ಸಂಭಾಷಣೆಗೆ ನನ್ನ ಮನ ಹಾತೊರೆಯುತ್ತಿದ್ದುದು ಸಹಜ. ಆದರೆ, ಮನಸ್ಸಿನ ಮೂಲೆಯಲ್ಲಿ ಒಂದು ಭಯವೂ ಇತ್ತು, ' ಇಂದಲ್ಲ ನಾಳೆ, ಈಕೆ ಮದುವೆಯಾಗಿ ಹೊರ ಹೋಗುವವಳು... ನಾನು ಎಷ್ಟಾದರೂ ಮೂರನೆಯ ವ್ಯಕ್ತಿ '. ಆದರೆ, ಅವಳ ಮಾತಿನ ಸಹಜತೆ ಮತ್ತು ವಿಶ್ವಾಸ ಈ ಭಯವನ್ನು ದೂರ ಮಾಡಿತ್ತು. ನನಗೆ ಇನ್ನೂ ಚೆನ್ನಾಗಿ ನೆನಪಿದೆ... ನನಗೆ ಸಣ್ಣ ಜ್ವರ ಬಂದಾಗ ಅವಳು ತೋರಿದ ಮಮತೆ ಅಮ್ಮನನ್ನು ನೆನಪಿಸುವಂತಿದ್ದದ್ದು. ನನ್ನ ಪ್ರತಿಯೊಂದು ನಿರ್ಧಾರವೂ ಅವಳ ಒಪ್ಪಿಗೆಯಿಂದಲೇ ಮುನ್ನಡೆದದ್ದು.

ಆದರೆ ಈಗ ಹಾಗಿಲ್ಲ. ಆಕೆಗೆ ನನ್ನ ಬಳಿ ಮಾತನಾಡಲು ಸಮಯವಿಲ್ಲ. ಬೇರೆ ಎಲ್ಲಕ್ಕೂ ಸಮಯ ಕೊಡುವ ಅವಳು ನನಗೆ ಮಾತ್ರ ಕೊಡಳು. ' 'ಕೊಡು' ಎಂದು ಅಪೇಕ್ಷೆ ಪಡುವುದು ಸರಿಯೇ ?? ಅವಳು ನನಗೆ ಕೊಡಲೇಬೇಕು ಎನ್ನುವ ಧೋರಣೆ ಸರಿಯೇ ?' ಎಂದು ಎಷ್ಟೋ ಬಾರಿ ನನಗೆ ನಾನೇ ಪ್ರಶ್ನಿಸಿಕೊಂಡಿದ್ದೇನೆ. ಮನಸ್ಸು ಮಾತ್ರ ಈ ವಿಚಾರದಲ್ಲಿ ಮೌನಿ. ಅವಳೊಟ್ಟಿಗಿನ ಈ ಸಲುಗೆ ಎಷ್ಟು ದಿನ ಸಾಧ್ಯ? ಇದೇಕೆ ನನ್ನ ಮನಸ ಹೊಕ್ಕುವುದಿಲ್ಲ?. ಇದಕ್ಕೆಲ್ಲ ಮೂಕವಾಗುವ ಮನ, ಕೇಳುವ ಒಂದೇ ಪ್ರಶ್ನೆ "ಅವಳೇಕೆ ಈಗ ಮಾತನಾಡುವುದಿಲ್ಲ... ಹಿಂದೆ ಹೀಗಿರಲಿಲ್ಲವಲ್ಲ".. ಇದಕ್ಕೆ ನನ್ನ ಬಳಿ ಉತ್ತರವಿಲ್ಲ. ಅವಳನ್ನೇ ನೇರವಾಗಿ ಕೇಳಿಯೂ ಕೇಳಿದ್ದೆ, " ಯಾಕೆ ಹೀಗೆ ಮಾಡುತ್ತಿದ್ದೆಯಾ ? " ಎಂದು.  'ಸಮಯವಿಲ್ಲ .. ' ಎನ್ನುವ ಉತ್ತರದೊಂದಿಗೆ  'ನನ್ನ ಆಪ್ತಮಿತ್ರರಿಗೇ  ಸಮಯ ಕೊಡಲಾಗುತ್ತಿಲ್ಲ.. ಇನ್ನು ನಿನಗೆ....  ' ಎನ್ನುವ ಮಾತೂ ಬಂದಿತ್ತು. ನಾನು ಅರ್ಥೈಸಿದ್ದು ಇಷ್ಟೇ " ನಿನಗೆ ಕೊಡುವಷ್ಟು ಸಮಯ ನನ್ನಲ್ಲಿಲ್ಲ...  " ಎಂದು. ಅದರೊಟ್ಟಿಗೆ ನನ್ನ ಸ್ಥಾನದ ಅರಿವೂ ಆಯಿತು. ನಾನೆಷ್ಟಾದರೂ ಮೂರನೆಯವನು.. ತಪ್ಪೋ.. ಸರಿಯೋ ತಿಳಿಯೆ. ಭಾವನೆಗಳ ವಿಷಯದಲ್ಲಿ ಮನಸ್ಸು ಬುದ್ಧಿಯ ಮಾತು ಕೇಳುವುದಿಲ್ಲ. ಅವಳ ಬದುಕು ಅವಳಿಷ್ಟ... 'ನಾನೇಕೆ ಹೀಗೆ ? ಇದೆಲ್ಲಾ ಹಾಗಾದರೆ ನನ್ನ ತಪ್ಪೇ ?...'

ಹಿಂದಿನಿಂದ ಬೆನ್ನಿನ ಮೇಲೆ ಕೈ ಹಾಕಿದ ಹರ್ಷ, " ಬಾ.. ಕಾಫಿ ಕುಡಿಯೋಣ .. ಇನ್ನು ಅರ್ಧ ಘಂಟೇಲಿ ಕ್ಯಾಂಟೀನ್ ಕ್ಲೋಸ್ ಆಗತ್ತೆ .. ಮಳೆ  ಬಿಟ್ಟಿದೆ .. ಯಾವಾಗ ಮತ್ತೆ ಶುರುವಾಗುತೋ ಏನೋ " ಎಂದ. ಅವನಿಂದ ಮುಖ ಮರೆಮಾಚಲು ಯತ್ನಿಸಿ, ಅತ್ತ ತಿರುಗಿ, " ಹೂ.. ಬಾ " ಎಂದು ಅವನೊಟ್ಟಿಗೆ ಎದ್ದೆ. ಅವನು

" ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬಾ ಪ್ರೀತಿ ...
   ಈಗ ಏಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ ... "

ಭಟ್ಟರ ಕವಿತೆ ಗುನುಗುತ್ತಾ ಮುಂದೆ ನಡೆದ. ನನ್ನ ಕುರಿತೇ ಹೇಳುತ್ತಿರುವನೇನೋ ಎಂದು ನನ್ನ ಮುಖದಲ್ಲಿ ಅಸಹಾಯಕತೆಯ, ಬೇಸರದ ಹುಸಿ ನಗೆ ಮಿಂಚಿ ಮರೆಯಾಯ್ತು. ಮುಗಿಲು ಕೂಡ ಅತ್ತು ಅತ್ತು ಸುಸ್ತಾಗಿ ಕುಳಿತಿತ್ತು. ಆದರೆ ಗುಡುಗುವ ಬಿಕ್ಕುವಿಕೆ ಮಾತ್ರ ನಿಂತಿರಲಿಲ್ಲ.