Sunday 16 November 2014

ಮೌನ

ಮೌನ....

ಹೇಳಿಬಿಡು ಹೇಳಬೇಕಾದ ಮಾತೆಲ್ಲವ,
ಹೊರ ಹಾಕಿಬಿಡು ಮನದಾಳದ ನೋವೆಲ್ಲವ....

ಮೌನ... 

ನೀನೇಕೆ ಇನ್ನೂ ತಿಳಿನೀರಿನ ಪ್ರಶಾಂತ ಸರೋವರ,
ಬಾ ... ವಿಪ್ಲವದ ಪ್ರವಾಹವಾಗಿ,
ಜಾತ್ರೆಯ ಬತ್ತಾಸಿನ ರಂಗಿನ ಮಾತನ್ನು ಕೊಚ್ಚು
ಬಣ್ಣ ಬಣ್ಣದ ಹೋಲಿಯಾಟದ ನಡುವೆ
ಬೆಪ್ಪಾಗಿ, ರಂಗುಹೀನವಾಗಿ ನಿಂತಿರುವ ಮೌನವೇ ...
ಹೇಳು ... ನಾನೂ ಇದ್ದೇನೆ ಎಂದು

ಮೌನ ...

ಇನ್ನೆಷ್ಟು ದಿನಗಳು  ಹೊದ್ದು ಮಲಗುವೆ ???
ಜೀವವಿದ್ದೂ ಇಲ್ಲದಂತೆ..


Saturday 15 November 2014

ಮೌಲ್ಯ

ಮೌಲ್ಯಗಳ ಬಗೆಗಿನ ಭಾರತೀಯರ ಅಸಡ್ಡೆಯ ಪರಾಕಾಷ್ಟೆಯನ್ನೂ ನೋಡಿದ್ದಾಯಿತು... ಕೆಲವು ವಸಂತಗಳ ಕೆಳಗೆ, ನಾನಾಗಿನ್ನು ಸಣ್ಣವನು, ಸಾಮಾಜಿಕ ಮೌಲ್ಯಗಳನ್ನು ಅಂದಿನ ಎನ್. ಡಿ. ಎ ಸರ್ಕಾರ ಕ್ರಮಬದ್ಧವಾಗಿ ಪಾಠ- ಪ್ರವಚನಗಳಲ್ಲಿ ಅಳವಡಿಸಬೇಕೆಂದು ಸೂಚಿಸಿತ್ತು.. ಅನಂತರ " ಕೇಸರೀಕರಣ " ಎನ್ನುವ ಹುಚ್ಚು ಹೊಳೆಯಲ್ಲಿ ಎಲ್ಲವು  ಕೊಚ್ಚಿಹೊದದ್ದು ಇತಿಹಾಸ... ನಾನು 'ಮೌಲ್ಯಗಳು'ಎಂದು ನಂಬುವ ಕೆಲವು ಸಂಗತಿಗಳನ್ನಷ್ಟೇ ಗಮನದಲ್ಲಿಟ್ಟುಕೊಂಡು ಅದನ್ನು ಬೇರೆಯವರ ಮೇಲೆ ಹೇರಬೇಕು ಎನ್ನುವುದು ನನ್ನ ಅಭಿಪ್ರಾಯವಲ್ಲ.. ಆದರೆ, ಇದು ಸರಿ.. ಇದು ತಪ್ಪು ಎನ್ನುವ ವೈಚಾರಿಕ ನೆಲೆಗಟ್ಟನ್ನು ಗುರುತಿಸಿಕೊಳ್ಳಲು ಸಾಧ್ಯವಾಗದ "ಬೌದ್ಧಿಕ ದಿವಾಳಿತನ"ದಲ್ಲಿರುವ ನಮ್ಮ ಯುವಜನಾಂಗದ ಭವಿಷ್ಯದ ಬಗ್ಗೆ ಆತಂಕ ಮೂಡುವುದು ಸಹಜ. ಇನ್ನು, ಜಾಗತೀಕರಣದ ನಂತರ ಭಾರತೀಯರಲ್ಲಿನ ಪ್ರಮುಖ ಬದಲಾವಣೆ ಎಂದರೆ ಜೀವನಶೈಲಿ...  ನನ್ನ ಸುತ್ತಲಿನ ಸಮಾಜ ಒಂದು ರೀತಿಯಲ್ಲಿ ಪ್ರವಹಿಸುವಾಗ ನಾನೊಬ್ಬ ಮುಖ್ಯವಾಹಿನಿಯಿಂದ ಹೊರ ನಿಂತುಕೊಳ್ಳಲಾಗದ ಪರಿಸ್ಥಿತಿ ಹಲವಾರು ಜನರಿಗಿರುವುದು ಸತ್ಯ. ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಮೊದಲು, ಸ್ವಾತಂತ್ರ್ಯಕ್ಕೂ ಸ್ವೆಚ್ಚಾಚಾರಕ್ಕೂ ಇರುವ ವ್ಯತಾಸ ಕಂಡುಹುಡುಕಿಕೊಳ್ಳಲಾಗದ ಪರಿಸ್ಥಿತಿ ನಮ್ಮದು... ಸ್ವಾತಂತ್ರ್ಯ ಗಟ್ಟಿಗೊಳಿಸಬೇಕಾದ್ದು  ನೈತಿಕ ಮೌಲ್ಯದ ನೆಲೆಗಟ್ಟನ್ನು.. ಆದರೆ ಅದೊಂದನ್ನು ಬಿಟ್ಟು ಮಿಕ್ಕೆಲ್ಲದ್ದನು ಅದು ಮಾಡುತ್ತಿರುವುದು ದುರಂತ.  " ನನ್ನ ಜೀವನ ನನ್ನದು.. ಅದರ ಮೇಲೆ ಯಾರ ಹಕ್ಕೂ ಇಲ್ಲ... " ಎನ್ನುವುದನ್ನು facebook ಪೋಸ್ಟ್ ಗಳಲ್ಲಿ .. ಇನ್ನು ಹಲವಾರು ಕಡೆ ನೋಡಿದ್ದೇನೆ... ನಾನೂ  ಅದನ್ನು ಒಪ್ಪುತ್ತೇನೆ.. ಖಂಡಿತವಾಗಿಯೂ ಅವರವರ ಜೀವನದ ಮೇಲೆ ಸಂಪೂರ್ಣ ಹಕ್ಕು ಅವರಿಗಿದೆ.. ಆದರೆ ಜೀವನದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ... ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆಯುವುದು ಅವರ ಜೀವನ ಶೈಲಿಯನ್ನು ನೋಡಿ.. ನನ್ನ ಜೀವನ ನನ್ನ ಸುತ್ತಲಿನವರಿಗೆ ಸಂದೇಶ... ನಾನು ನನ್ನ ಸಮಾಜಕ್ಕೆ ನೈತಿಕ ಹೊಣೆಗಾರಿಕೆಯ  ಸಂದೇಶ ನೀಡಬೇಕು ಹೊರತು ಸ್ವೇಚ್ಚಾಚಾರದ ಸಂದೇಶವಲ್ಲ. 

ನನ್ನ ಸ್ನೇಹಿತನ ಬಲವಂತಕ್ಕೋ, ಅಥವಾ ನನ್ನ Prestige ಉಳಿಸಿಕೊಳ್ಳಲೋ ಹಲವಾರು ಜನ ಕುಡಿತದ ಚಟಕ್ಕೆ ಬೀಳುತ್ತಾರೆ.. ಇನ್ನು ಹಲವರದ್ದು Social drinking... ಆರೋಗ್ಯವನ್ನು ಹಾಳುಮಾಡಿಕೊಳ್ಳಲು ಹೊಸದೊಂದು ಹೆಸರು... ಕುಡಿಯಲು.. ಕುಣಿಯಲು ಒಂದಷ್ಟು ಜಾಗ... ಇನ್ನ್ಯಾರಿಗೋ ಲಾಭ...  ಗಾಂಧಿ ಜಯಂತಿಯ ದಿನದ ಭಾಷಣ ಕೇಳಿದಾಗ ಮನಸ್ಸಿನ ಮೂಲೆಯಲ್ಲಿ ಕುಳಿತ ಸಿನಿಕ ರಾಕ್ಷಸ ಗಹ  ಗಹಿಸಿ ನಕ್ಕು ಹೇಳುತ್ತಾನೆ, " ಕೆಲ ದಿನ ಕಾದು ನೋಡು... ಇದೇ ವ್ಯಕ್ತಿಯ ಗಾಂಧಿ ಪ್ರೇಮವನ್ನು" ಎಂದು ... ಮನಸ್ಸಿನ ಚಾವಡಿಯ ಮೇಲೆ ನಿಂತು ಹಿಂದೆ ಬರುವವರ ನೋಡಿ ನಂತರ ಹೇಳಿ, " ನನ್ನ ಜೀವನ ಹೇಗಿರಬೇಕು" ಎಂದು.. ಏಕೆಂದರೆ " ಮನುಷ್ಯ ಸಂಘ ಜೀವಿ" .. ಅಂದಹಾಗೆ... ಇದರಿಂದ " ಗುರೂಜಿಗಳ " ಸುದರ್ಶನ ಯೋಗ ಮತ್ತು stress relief  workshop ಗಳಲ್ಲಿ ಜನ ಕಡಿಮೆ ಆಗಬಹುದು... ಆದರೆ ಉತ್ತಮ ಸಮಾಜದ ಬೆಳವಣಿಗೆ ಸಾಧ್ಯ. 

ನಾನು ಮಡಿವಂತಿಕೆಯ ಜೀವನವನ್ನಲ್ಲ .. ಪಾವಿತ್ರ್ಯವುಳ್ಳ ಜೀವನವನ್ನು ನನ್ನ  ಭಾರತೀಯರಲ್ಲಿ ನೋಡಲಿಚ್ಚಿಸುತ್ತೇನೆ.